Friday, October 7, 2011

ನ್ಯಾನೋ ಕಾರು ಮತ್ತು ನ್ಯಾನೋ ಕಂಪ್ಯೂಟರ್ !!

ವಿಶ್ವದಲ್ಲೇ ಅತೀ ಕಡಿಮೆ ಬೆಲೆಯ ಕಾರು ತಯಾರಿಸಿದ ಕೀರ್ತಿ ಭಾರತಕ್ಕೆ ಸಲ್ಲಬೇಕು. ಟಾಟಾ ಕಂಪನಿ ನ್ಯಾನೋ ಅನ್ನೋ ಈ ಕಾರು ಹೊರ ತಂದಿದ್ದಾಗ ಇಡೀ ವಿಶ್ವ ಬೆರಗಾಗಿ ನೋಡಿತ್ತು.. ಈಗ ಮತ್ತೆ ಇಂಥಾ ಕೀರ್ತಿ ಭಾರತ ದೇಶಕ್ಕೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ touchscreen  tablet  ಕಂಪ್ಯೂಟರ್ ಬರುತ್ತಿದೆ.. ಹೆಸರು "ಆಕಾಶ್".


ಇದು ಪ್ರಾರಂಭವಾಗಿ ತುಂಬಾ ದಿನಗಳೇ ಆದವು. DataWind ಅನ್ನೋ ಕಂಪನಿ ಅತೀ ಕಡಮೆ ಬೆಲೆಯ ಕಂಪ್ಯೂಟರ್ ಮಾಡಿ ಕೊಡಬೇಕು ಅನ್ನೋ ಕನಸು ಕಂಡು ಬರೋಬ್ಬರಿ ಎರಡು ವರ್ಷಗಳಾದವು. ಇದ್ಯವತ್ತೋ ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಕೊಡಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಮುಂದೂಡುತ್ತಲೇ ಹೋದ ಇಂಥಾ ಒಂದು ಪ್ಲಾನ್ ಕೊನೆಗೂ ಈಗ ಸಾಕಾರಗೊಂಡಿದೆ. ಕೇವಲ ೧,೫೦೦ ರೂಪಾಯಿಗೆ touchscreen  ಕಂಪ್ಯೂಟರ್!!!

ಏನಿದು tablet PC :

Tablet  PC ಅಂದರೆ ಕಂಪ್ಯೂಟರ್ ಥರದ್ದೇ ಒಂದು ಸಾಧನ ಆದರೆ ಇದರ ಗಾತ್ರ ಮಾತ್ರ ಕಂಪ್ಯೂಟರ್ ಗಿಂತ  ತುಂಬಾ ಚಿಕ್ಕದು. ಕಂಪ್ಯೂಟರ್ ನಲ್ಲಿ ಮಾಡಲಾಗುವ ಬಹುತೇಕ ಎಲ್ಲ ಕೆಲಸಗಳನ್ನು ಇದರಲ್ಲಿ ಮಾಡಬಹುದು. ಇಂಥ ಒಂದು ಐಡಿಯಾ ಬಂದಿದ್ದು ಮೊದಲು ೨೦೦೧ ರಲ್ಲಿ. ಆಗ ಮೈಕ್ರೋಸಾಫ್ಟ್ ಅನ್ನೋ ಸಾಫ್ಟ್ವೇರ್ ನ ದೈತ್ಯ ಕಂಪನಿ ಇಂಥ ಒಂದು ಸಾಧನ ಹೊರತಂದಿತ್ತು. ಆದರೆ ಆನಂತರದ ಕೆಲವು ವರ್ಷ ಅದು ಮೊಬೈಲ್ ಫೋನ್ ಗಳಿಗೆ ಸೀಮಿತ ವಾಯಿತಲ್ಲದೆ ಮಾರುಕಟ್ಟೆಗೆ ಬರಲೇ ಇಲ್ಲ.

ಮುಂದೆ?
ಆಮೇಲೆ ನಮಗೆಲ್ಲರಿಗೂ ತಿಳಿದಿರುವಂತೆ ಬೇರೆ ಕಂಪನಿಯ ಇಂಥ Tablet  PC ಗಳು ಜನಪ್ರಿಯವಾದವು. ಸುಮಾರು ೭ ರಿಂದ ೧೦ ಇಂಚು ಪರದೆಯ ಈ ಸಾಧನಗಳು ಎಲ್ಲರ ಕೈಗೂ ಬರತೊಡಗಿದವು. ಆದರೆ  ಇದರ ಬೆಲೆ ಸಾಮಾನ್ಯರ ಕೈಗೆ ಎಟಕುವ೦ತಿರಲಿಲ್ಲ . ಇಂಥ ಸಾದನಗಳು ಸುಮಾರು ೩೦ ರಿಂದ ೫೦ ಸಾವಿರ ಬೆಲೆಯದ್ದಾಗಿದ್ದು ಶ್ರೀಮತರಿಗೆ ಮೀಸಲು ಎನ್ನುವಂತಿತ್ತು.   ಆದರೆ ಎರಡು ವರ್ಷ ಗಳಿಗೆ ಹಿಂದೆ ಭಾರತ ಸರ್ಕಾರ ಇಂಥ ಸಾಧನಗಳು ವಿದ್ಯಾರ್ಥಿಗಳಿಗೂ ಸಿಗಬೇಕು ಅಂತ ತೀರ್ಮಾನಿಸಿ Datawind ಅನ್ನೋ ಕಂಪನಿ ಗೆ ಇದರ ಜವಾಬ್ದಾರಿ ವಹಿಸಿತು. ಆನತರ Datawind ಮತ್ತು ಸಿಕಂದರಾಬಾದ್ ಮೂಲದ Quad Electronics ಕಂಪನಿ ಜೊತೆ ಸೇರಿ ಈಗ ಇಂಥ ಒಂದು Tablet  PC  ಹೊರತಂದಿದೆ.

ಇದರಲ್ಲಿ ಏನಿದೆ?
ಆಕಾಶ್ ಕಂಪ್ಯೂಟರ್ ನ configuration  ಈ ಕೆಳಗಿನಂತಿದೆ.

ಹೆಸರು : ಆಕಾಶ್
ಪರದೆ : ೭ ಇಂಚಿನ ಸ್ಪರ್ಶಜ್ಞಾನದ ಪರದೆ (Touchscreen )
ಒಪೆರಟಿಂಗ್ ಸಿಸ್ಟಮ್ (Operating  System ) : ಗೂಗಲ್ ಅನ್ದ್ರೊಇದ್ 
ಪ್ರೋಸೆಸರ್ : ೩೬೬ MHz 
RAM : ೨೫೬ MB 
ಮೆಮೊರಿ: ೨ GB  (೩೨ GB  ವಿಸ್ತರಿಸಬಹುದಾಗಿದೆ)
ಇಂಟರ್ನೆಟ್: Wi -Fi ಮೂಲಕ 
ಎರಡು USB  ಸ್ಲಾಟ್ ಇದೆ.
ಮೂರು ಗಂಟೆ ಯಾ ತನಕ ಕೆಲಸ ಮಾಡಬಹುದಾದ ಬ್ಯಾಟರಿ.

ಬೆಲೆ: ವಿದ್ಯಾರ್ಥಿ ಗಳಿಗೆ ಸರಕಾರದ ಮೂಲಕ ರೂಪಾಯಿ :೧೧೦೦-೧೨೦೦ (ಉಚಿತವಾಗಿ ನೀಡಲಾಗುತ್ತದೆ ಅಂತನೂ ಹೇಳಿದ್ದಾರೆ. ಬಹುಶ ಶೀಘ್ರದಲ್ಲಿ  ಮತದಾನ ಇರುವ ರಾಜ್ಯಗಳಲ್ಲಿ ಸಿಗಬಹುದೇನೋ :))
ಉಳಿದ ನನ್ನ ನಿಮ್ಮಂಥ ನಾಗರಿಕರಿಗೆ ಇದು ನವೆಂಬರ್ ತಿಂಗಳಿನಿಂದ ಮಾರುಕಟ್ಟೆಯಲ್ಲಿ ದೊರಕುತ್ತದೆ. ಬೆಲೆ ೩೦೦೦ ರೂಪಾಯಿ.    

ಇತರ ಇಂತಹ ಸಾಧನಗಳು ಮತ್ತು ಅವುಗಳ ಬೆಲೆ ಈ ಕೆಳಗಿನಂತಿದೆ

ರಿಲೆಯಾನ್ಸೆ ಕಂಪನಿಯ Tablet  PC :೧೩೦೦೦ ರೂಪಾಯಿ
ಎಂ ಎಸ್ಸ್ ಎಯೇ  ಕಂಪನಿಯ Tablet  PC :೧೪೦೦೦   ರೂಪಾಯಿ
ಬೀಟಲ್  ಕಂಪನಿಯ Tablet  PC :೧೦೦೦೦  ರೂಪಾಯಿ
ಮರ್ಕುರಿ ಕಂಪನಿಯ Tablet  PC :೯೫೦೦  ರೂಪಾಯಿ  
ಹೆಚ್ ಸಿ ಎಲ್  ಕಂಪನಿಯ Tablet  PC :೧೩೦೦೦ - ೩೨೦೦೦  ರೂಪಾಯಿ
ಆಪ್ಪಾಲ್ ಕಂಪನಿಯ Tablet  PC :೨೭೦೦೦ -೩೮೦೦೦  ರೂಪಾಯಿ  
LACS ,Infibeam Phi, OlivePad ,Creative ,Binatone ,Spice , Samsung  ಮುಂತಾದ ಕಂಪೆನಿಯವೂ ಸಿಗುತ್ತವೆ. ಬೆಲೆ ೧೪೦೦೦ ದಿಂದ ೩೮೦೦೦ ತನಕ.
ಇತ್ತೀಚಿಗೆ ಎಲ್ಲರ ಕೈಲೂ ಮೊಬೈಲ್ ಗಳಿದ್ದವು.. ಇನ್ನು ಮುಂದೆ Tablet  PC . ಭಾರತದಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ ಸುಮಾರು ೭ % . ಚೀನಾದಲ್ಲಿ ೪೦ %. ಇನ್ನು ಕೆಲವೇ ವರ್ಷಗಳಲ್ಲಿ ನಾವು ಎಲ್ಲರನ್ನೂ ಮೀರಿಸಿ ಮುಂದೆ ಸಾಗುವುದರಲ್ಲಿ ಅನುಮಾನವಿಲ್ಲ. 

ಗೋರೆ ಉವಾಚ :
ಅಮೆರಿಕಾಕ್ಕೆ ಹೊರಟಿದ್ದ ನಮ್ಮ ಸದಾನಂದ "ಆಕಾಶ್" ಅನ್ನೋ ಚಿಕ್ಕ TouchScreen ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದ.  ವಯರುಗಳೇ ಇಲ್ಲದೆ ಇಂಟರ್ನೆಟ್ ನೋಡುವ ಈ ಸಾಧನ ಅತ್ಯಂತ ಕಡಿಮೆ ಬೆಲೆಯದ್ದು ಅಂತ ತನ್ನ ಪಕ್ಕದವರೊಡನೆ ಕೊಚ್ಚಿಕೊಂಡ. ಅಷ್ಟರಲ್ಲೇ ಈ ವಯರ್ ಲೆಸ್ ಟೆಕ್ನಾಲಜಿ ಪ್ರಾರಂಭವಾಗಿದ್ದು ಎಲ್ಲಿ ಅನ್ನೋ ಚರ್ಚೆ ಶುರುವಾಯಿತು. 
ಅಮೇರಿಕಾದವ: ನಾವೊಂದು ಸಾರಿ ಭೂಮಿ ಅಗೆದ್ವಿ. ೧೦೦ ಫೀಟ್ ಕೆಳಗೆ ನಮಗೆ ವಯರು ಸಿಗ್ತು. ಅಷ್ಟು ವರ್ಷ ಗಳ ಹಿಂದೇನೆ ನಾವು ವಯರು ಗಿಯರು ಎಲ್ಲ ನಿಷ್ಪ್ರಯೋಜಕ ಅಂತ  ಹೂತು ಬಿಟ್ಟಿದ್ವಿ.. ಅಂದ್ರೆ ನೂರು ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು.
ಚೀನಾದವ :ನಾವೊಂದು ಸಾರಿ ಭೂಮಿ ಅಗೆದ್ವಿ. ೩೦೦  ಫೀಟ್ ಕೆಳಗೆ ನಮಗೆ ವಯರು ಸಿಗ್ತು. ಅಂದ್ರೆ ಮುನ್ನೂರು ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು.
ಜಪಾನಿನವ : ನಾವೊಂದು ಸಾರಿ ಭೂಮಿ ಅಗೆದ್ವಿ. ೫೦೦  ಫೀಟ್ ಕೆಳಗೆ ನಮಗೆ ವಯರು ಸಿಗ್ತು. ಅಂದ್ರೆ ಐನೂರು  ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು.

ಇದನ್ನೆಲ್ಲಾ ಕೇಳಿದ ನಮ್ಮ ಸದಾನಂದ ಏನಂದ ಗೊತ್ತೇ?
ನಾವೊಂದು ಸಾರಿ ಭೂಮಿ ಅಗೆದ್ವಿ. ೧೦೦ ಫೀಟ್  ಬಿಡಿ , ೧೦೦೦, ೨೦೦೦ ೧೦೦೦೦ ಕೆಳಗೆ ಹೋದರು ನಮಗೆ ಒಂದೇ ಒಂದು ವಯರು ಸಿಗಲಿಲ್ಲ . ಅಂದ್ರೆ ಅಷ್ಟು ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು. !! 
 ಅಷ್ಟು ಹೇಳಿ ಸದಾನಂದ ತನ್ನ ಕಂಪ್ಯೂಟರ್ ನಲ್ಲಿ ಕೆಲಸ ಮುಂದುವರೆಸಿದ.
ಎಲ್ಲರೂ ಮೂಕರಾಗಿ ಬಿಟ್ಟರು..


Friday, July 29, 2011

ಮತ್ತೆ.. ಸುಮ್ನೆ ತಮಾಷೆಗೆ-೫ !!

  ಅಬಲೆ 
ಪ್ರೀತಿ ಎಂಬುವುದು ನಾಲ್ಕು ಪದದ ಓಲೆ,
ತಿಳಿದವನಿಗೆ ಗೊತ್ತು ಅದರ ಒಳಗಿನ ಲೀಲೆ,
ಆದರೆ ಅರಿಯದೆ ಹೋದಳು ಆ ಬಾಲೆ,
ಅದಕ್ಕೆ ಆಕೆ ಅಬಲೆ!!  

ಜಾ-ಗೋರೆ 
ಆ ಕಾಲೇಜಿನ ಪ್ರಾರಂಭದ ವೇಳೆ,
ಕಾಯುತ್ತಿದ್ದೆ ಅವಳಿಗಾಗಿ ತುಂಬಾ ವೇಳೆ,
ಬರಲಿಲ್ಲ  ಆ ದಿನ ಆ ಬಾಲೆ,
ನಿದ್ದೆ ಬರದೆ ನಾನಾದೆ ಜಾ-ಗೋರೆ ಜಾ-ಗೋರೆ !!!

ಫೀಮೇಲು 
ನಮ್ಮ ಕಾಲೇಜಿನ ಫೀಮೇಲು ,
ಇದ್ದರು ತುಂಬಾ ಚಾಲೂ,
ಕೊಡುತ್ತಿದ್ದರು ಎಲ್ಲರಿಗೂ ಸ್ಮೈಲು ,
ಹುಡುಗರಾಗುತ್ತಿದ್ದರು ಎಲ್ಲ ಸಬ್ಜೆಕ್ಟ್ ಫೈಲು !!!


ತುಂಬಾ ದಿನಗಳಾದವು ಬ್ಲಾಗಿಗೆ ಬರದೆ.. ಜೂನ್ ೯ನೆ ತಾರೀಕಿಗೆ ನಾನು  ಹೆಣ್ಣು ಮಗುವಿಗೆ ಅಪ್ಪನಾದೆ.. ಬಹುಶ ಜೀವನದ ಸಂತಸದ ಕ್ಷಣಗಳು ಮತ್ತೆ ಪ್ರಾರಂಭವಾಗಿವೆ.. ನಾನು ಮತ್ತೆ ಈ ಬ್ಲಾಗ್ ಲೋಕಕ್ಕೆ ಮರಳುತ್ತಿದ್ದೇನೆ.. ಎಂದಿನಂತೆ ನಿಮ್ಮ ಬೆಂಬಲವಿರಲಿ..

ಗೋರೆ ಉವಾಚ:
ಒಬ್ಬ ಸಾಮಾನ್ಯ ಮನುಷ್ಯ ಪುಸ್ತಕಗಳ ಜೊತೆಗಿರುತ್ತಾನೆ.. ಆದರೆ ಒಬ್ಬ ಅಸಾಮಾನ್ಯ ಮನುಷ್ಯ ಪುಸ್ತಕದೊಳಗಿರುತ್ತಾನೆ.. ನನ್ನಂತೆ ಅಸಾಮಾನ್ಯರಾಗಿರಿ.. ನಾನು ಪುಸ್ತಕದ ಒಳಗಿದ್ದೇನೆ..ಅದೇ Facebook
!!!!


Tuesday, March 15, 2011

ನೆನಪಿನಾಳದಿಂದ!

ಆಗಷ್ಟೇ MCA  ಮುಗಿಸಿ ಬೆಂಗಳೂರು ಸೇರಿದ್ದೇ.. ದಿನಾ ಬೆಳಿಗ್ಗೆ ಎದ್ದು ಕೆಲಸ ಹುಡುಕುವುದೇ ಕೆಲಸ!. ಎಷ್ಟೇ ಕಷ್ಟ ಪಟ್ಟರೂ ಉಹುಂ ಒಂದೇ ಒಂದು ಕೆಲಸ ಸಿಕ್ಕಿರಲಿಲ್ಲ. ಕೊನೆಗೂ ಅದೊಂದು ಕಾಲೇಜ್ ನವರು ಕರೆದು ಇಲ್ಲಿ ಒಂದಷ್ಟು ಕಲ್ಸಪ್ಪ ಅಂತ ಹೇಳಿದ್ರು ನೋಡಿ, ಖುಷಿಯಿಂದ ಉಬ್ಬಿ ಬಿಟ್ಟಿದ್ದೆ. ಏನೋ ಒಂದು ಕೆಲಸ ಸಿಗ್ತಲ್ಲ ಅನ್ನೋದಕ್ಕಿಂತ ತೆಗೆದು ಕೊಂಡಿದ್ದ ಎಜುಕೇಶನ್ ಲೋನ್ ಕಟ್ಟೋಕೆ ಸ್ವಲ್ಪ ದುಡ್ಡು ಬರತ್ತಲ್ಲ ಅಂತ ಸಮಾಧಾನ ಪಟ್ಟಿದ್ದೆ. ಆಗ ನನಗೆ ಸಿಕ್ಕಿದ್ದು ಬರೋಬ್ಬರಿ ಆರು ಸಾವಿರ ರೂಪಾಯಿ ಸಂಬಳದ ಕೆಲಸ. ಸರಿ ನೋಡೇ ಬಿಡೋಣ ಅಂತ ಕೆಲಸಕ್ಕೆ ಸೇರಿದ್ದೆ.
"ನಿನ್ನ ಮೊದಲ್ನೇ ಕೆಲಸ ಪಾರ್ಟಿ ಏನೂ ಕೊಡೋಲ್ವ" ಅಂತ ನನ್ನ ಹತ್ತಿರದ ಸಂಬಧಿಕರೊಬ್ಬರು ಗಂಟು ಬಿದ್ದಿದ್ದರು. ಸರಿ ಅದೂ ಒಂದು ಆಗಿಬಿಡಲಿ ಅಂತ ಅದೊಂದು ಸುಮುಹೂರ್ತದಲ್ಲಿ ಬನ್ನಿ ಹೋಗೋಣ ಅಂತ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋದೆ. ಅವರೋ ಹೆಂಡತಿ ಮಕ್ಕಳನ್ನೆಲ್ಲ ಕರೆದು ಕೊಂಡು ಬಂದೆ ಬಿಟ್ರು. ನಮ್ಮ ಕಾಲೇಜ್ ಸಮಯದಲ್ಲೆಲ್ಲ ಪಾರ್ಟಿ ಅಂದ್ರೆ ಹೆಚ್ಚಿಗೆ ಅಂದ್ರೆ ೨೦೦-೩೦೦ ರೂಪಾಯಿಗೆ ಮುಗ್ಯೋದು (೮-೧೦ ವರ್ಷಗಳ ಹಿಂದಿನ ಮಾತು ಬಿಡಿ). ಇಲ್ಲಿ ಹೆಚ್ಚಂದರೆ ೧೦೦೦ ರುಪಾಯಿ ಆದೀತು. ಹಾಗಂತ ಲೆಕ್ಕಾಚಾರ ಹಾಕಿದ್ದೆ. ಸರಿ ನಮ್ಮ ಪಾರ್ಟಿ ಶುರು ಆಗಿಯೇ ಬಿಟ್ಟಿತು. ಬಂದಿದ್ದ ನನ್ನ ಸಂಬಧಿಕ ಆತನ ಹೆಂಡತಿ ಮತ್ತು ಇಬ್ಬರು ಮಕ್ಕಳು, ನಾನು ಮತ್ತು ನನ್ನ ಜೊತೆಗಿದ್ದದ್ದು ನನ್ನ ಸ್ನೇಹಿತ ಸದಾನಂದ.
ಅದೇನೇನು ತಿಂದರೋ ಬಿಟ್ರೋ ನನಗಂತೂ ಒಂದೂ ಗೊತ್ತಾಗಲಿಲ್ಲ.. ಬೆಂಗಳೂರಿಗೆ ನಾವು ಹೊಸತು. ಹೋಟೆಲ್  ಮೆನು ನಲ್ಲಿದ್ದ ಐಟಂ ಗಳು ಏನೆಂದೇ ನನಗೆ ಅರ್ಥವಾಗದೆ ಒಂದು ಮಸಾಲೆ ದೋಸೆ ತಿಂದು ನಾನು ನನ್ನ ಸ್ನೇಹಿತ ತಣ್ಣಗೆ ಕೂತು ಬಿಟ್ವಿ. ಅದ್ದೋ ಇದೂ ಆಗಿ ಕೊನೆಗೂ ಬಿಲ್ಲು ಬರುವ ಸಮಯ ಬಂತು ನೋಡಿ.
ಒಂದು ಕ್ಷಣ ನಾನು ಬೆಚ್ಚಿ ಬಿದ್ದೆ!. ಬರೋಬ್ಬರಿ ೧೬೦೦ ರೂಪಾಯಿ ಬಿಲ್ಲು! ಮೆಲ್ಲನೆ ನನ್ನ ಜೇಬಿನಿಂದ ದುಡ್ಡು ತೆಗೆದು ಎನಿಸಿದೆ. ಇದ್ದಿದ್ದು ೧೦೦೦ ಅಷ್ಟೇ. ಮೆಲ್ಲನೆ ಸದಾನಂದನಲ್ಲಿ "ದುಡ್ದೆಷ್ಟಿದೆ" ಅಂತ ಕೇಳಿದೆ. ಆತನಲ್ಲಿ ಇದ್ದಿದ್ದು ೨೦೦ ರೂಪಾಯಿ ಅಷ್ಟೇ. ಮುಗಿದೇ ಹೋಯ್ತು. ಇವತ್ತು ಇನ್ನು ಇಲ್ಲಿ ಮಾನ ಮರ್ಯಾದೆ ಎಲ್ಲಾ ಹರಾಜು ಗ್ಯಾರೆಂಟಿ. ಅದ್ಯಾಕೋ ಇದನ್ನೆಲ್ಲಾ ಅನುಭವಿಸಿರದ ನಾನು ಮೆಲ್ಲನೆ ಬೆವರತೊಡಗಿದ್ದೆ. ಅಷ್ಟರಲ್ಲಿ ಸದಾನಂದ ಮೆಲ್ಲನೆ ಮೇಲೆದ್ದ. ಈಗ ಬರ್ತೀನಿ ಅಂದವನೇ ಅಲ್ಲಿಂದ ಎದ್ದು ಹೋಗಿ ಬಿಟ್ಟ. ಎಲ್ಲಿಗೆ ಏನು ಅಂತ ಏನೂ ತಿಳಿಯದ ನಾನು ಅವಕ್ಕಾಗಿಬಿಟ್ಟೆ. ಒಂದು ಗ್ಲಾಸಿಗೆ ನೀರು ಬಗ್ಗಿಸಿ ಮೆಲ್ಲನೆ ಕುಡಿಯತೊಡಗಿದೆ. ೫ ನಿಮಿಷ ೧೦ ನಿಮಿಷ ಕಳೆದರೂ ಸದಾನಂದನ ಪತ್ತೆಯಿಲ್ಲ.
ಏನ್ ಮಾಡ್ಲಿ. ಪಕ್ಕದಲ್ಲೇ ಇದ್ದ ನನ್ನ ಸಂಬಧಿಕರಲ್ಲೇ ದುಡ್ಡು ಕೇಳಲೇ. ಏನೋ ಒಂದು ಸುಳ್ಳು ಹೇಳಲೇ? ದುಡ್ಡು ಮರ್ತು ಬಂದೆ, ಇಲ್ಲ ಏಟಿಎಂ ಕಾರ್ಡ್ ಮರ್ತು ಬಂದೆ, ಏನಂತ ಹೇಳಲಿ. ಮನಸ್ಸಿನಲ್ಲೇ ಆಲೋಚನೆಗಳ ಓಟ. ಎಲ್ಲಕ್ಕಿಂತ ಹೆಚ್ಚಾಗಿ ಮಾನ ಮರ್ಯಾದೆ ಎಲ್ಲ ಹರಾಜಯಿತಲ್ಲ ಅನ್ನೋ ಸಂಕಟ. ಮತ್ತೆ ಈ ಸದಾನಂದ ನಡು ನೀರಲ್ಲಿ ಕೈ ಕೊಟ್ಟು ಒಡಿ ಬಿಟ್ನಲ್ಲ ಅನ್ನೋ ಸಿಟ್ಟು. ನಾನು ಪೂರ್ತಿ ಬೆವರಿನಿಂದ ಒದ್ದೆ ಯಾಗಿದ್ದೆ. ಇಲ್ಲ ಇನ್ಯಾವ ದಾರಿಯೂ ಉಳಿದಿಲ್ಲ. ಅವರನ್ನ ದುಡ್ಡು ಕೇಳಲೇ ಬೇಕು ಇಲ್ಲಾ ಹೋಟೆಲ್ ನಲ್ಲಿ ಪಾತ್ರೆ ತೊಳೆಯಲೇ ಬೇಕು. ಒಂದು ನಿರ್ಧಾರಕ್ಕೆ ಬಂದೆ. ದುಡ್ಡು ಮರ್ತು  ಬಂದೆ ಅಂತ ಹೇಳಿ ಪಾರ್ಟಿಗೆ ಬಂದವರಲ್ಲೇ ೭೦೦ ರೂಪಾಯಿ ತಗೊಂಡು ಏನಾದ್ರು ಮಾಡಿ ನಾಳೆ ವಾಪಸು ಕೊಡೋದು ಅಂತ ತೀರ್ಮಾನಿಸಿದೆ. ಇನ್ನೇನು ಕೇಳೋಣ ಅಂತ ಹೊರದೊವಷ್ಟ್ರಲ್ಲಿ ನಮ್ಮ ಸದಾನಂದ ಬಂದೆ ಬಿಟ್ಟ!!!
ನೇರವಾಗಿ ಬಂದು ನನ್ನ ಪಕ್ಕ ಕೂತವನೆ , ಮೆಲ್ಲನೆ ನನ್ನ ಕೈಗೆ ಒಂದಷ್ಟು ದುಡ್ಡು ಮೆಲ್ಲನೆ ಇಟ್ಟು ಬಿಟ್ಟ. ಬಗ್ಗಿ ಎಣಿಸಿದೆ. ೧೦೦೦ ರೂಪಾಯಿ. ಎಲ್ಲಿಂದ ಬಂತು, ಹೇಗೆ ಬಂತು ಕೇಳೋವಷ್ಟು ಸಮಯವಿಲ್ಲ. ನನ್ನಲ್ಲಿದ್ದ ದುಡ್ಡು , ಸದಾನಂದ ಕೊಟ್ಟ ದುಡ್ಡು ಎರಡೂ ಸೇರಿಸಿ ಬಿಲ್ಲು ಪಾವತಿಸಿದವನೇ ಅಲ್ಲಿಂದ ಎದ್ದು ಬಂದೆ. ಎಷ್ಟೇ ಕೇಳಿದರೂ ದುಡ್ಡು ಎಲ್ಲಿಂದ ಬಂತು, ಉಹುಂ ಸದಾನಂದ ಬಾಯಿ ಬಿಡಲೇ ಇಲ್ಲ. ನಮ್ಮ ರೂಂ ಸೇರಿಕೊಂಡೆವು.
ದುಡ್ಡು ಎಲ್ಲಿಂದ ಬಂತು ನಾನು ಸದಾನಂದನಲ್ಲಿ ಕೇಳುತ್ತಲೇ ಇದ್ದೆ. ಆತನಿಗೆ ಇದ್ದಿದ್ದು ಆಗ ೩೫೦೦ ರೂಪಾಯಿ ಸಂಬಳ. ಅದು ಬೇರೆ ತಿಂಗಳ ಕೊನೆ. ಆತನಲ್ಲಿ ಅಷ್ಟು ದುಡ್ಡು ಇರೋದಕ್ಕೆ ಸಾಧ್ಯವೇ ಇಲ್ಲ. ಕೊನೆಗೂ ನನ್ನ ಕಾಟ ತಾಳದಾದಾಗ ಸದಾನಂದ ಮೆಲ್ಲನೆ ತನ್ನ ಕೈ ತೋರಿಸಿದ. ನಾನು ಒಂದು ಕ್ಷಣ ಅವಕ್ಕಾದೆ.! ಆತನ ಬೆರಳಲ್ಲಿದ್ದ ಚಿನ್ನದ ಉಂಗುರ ಕಾಣೆಯಾಗಿತ್ತು. ಆತ ಮಧ್ಯದಲ್ಲಿ ಎದ್ದು ಹೋಗಿದ್ದು ಎಲ್ಲಿಗೆ ಅಂತ ಆಗ ನನಗೆ ಅರ್ಥವಾಗಿತ್ತು. ಆತ, ತನ್ನ ಕೈಯಲ್ಲಿದ್ದ ಉಂಗುರವನ್ನೇ ಅಲ್ಲೇ ಎಲ್ಲೊ ಮಾರವಾಡಿಯ ಗಿರವಿ ಅಂಗಡಿಯಲ್ಲಿ ಅಡವಿಟ್ಟು ದುಡ್ಡು ತಂದಿದ್ದ. !! ನಾನು ಮಾತೆ ಬರದೆ ಮೂಕನಾಗಿದ್ದೆ.
ಅಂಥಾ ನನ್ನ ಗೆಳೆಯ ಮೊನ್ನೆ ಹಸೆ ಮಣೆ ಏರಿದ್ದಾನೆ. ಮದುವೆಗೆ ನಾನೂ ಹೋಗಿದ್ದೆ. ಆತನ ಕೈಯಲ್ಲಿ ೩-೪ ಉಂಗುರಗಳು ಆವತ್ತು ಹೊಳೆಯುತ್ತಿದ್ದವು. ಯಾಕೋ ಎಲ್ಲವೂ ಇವತ್ತು ನೆನಪಾಯಿತು.

ಗಮನಿಸಿ: ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಬ್ಲಾಗ್ ಕಡೆ ತಲೆ ಹಾಕದೆ ತುಂಬಾ ದಿನವಾಯಿತು. ನಿಮ್ಮೆಲ್ಲರ ಲೇಖನಗಳನ್ನು ಒಂದೊಂದಾಗಿ ಓದಬೇಕು. ನಾನೂ ಒಂದಷ್ಟು ಬರೀಬೇಕು. ಎಂದಿನಂತೆ ನಿಮ್ಮ ಪ್ರೋತ್ಸಾಹ ವಿರಲಿ. ಇಷ್ಟು ದಿನ ಕಾಣೆಯಾಗಿದ್ದಕ್ಕೆ ಕ್ಷಮೆಯಿರಲಿ.

ಗೋರೆ ಉವಾಚ: ರಸ್ತೆಗಳಿಗೆ ಮತ್ತು ಹುಡುಗಿಯರಿಗೆ ಸಾಮ್ಯತೆ ಇದೆ. ಎರಡರಲ್ಲೂ , ಉಬ್ಬು ತಗ್ಗುಗಳು, ತಿರುವುಗಳು ಹೆಚ್ಚು. ಹಾಗೆಯೇ ಅಪಾಯವೂ ಸಹ.!!