Wednesday, April 7, 2010

ಮತ್ತೆ ಭೂತದ ಬೆನ್ನು ಹತ್ತಿ!!!

ಭಾಗ ಒಂದು ಇಲ್ಲಿ ಓದಿ..

"ಆವತ್ತೇ ನನಗೆ ಗೊತ್ತಾಗಿ  ಹೋಗಿತ್ತು ಇದು ನನ್ನ ಬೆನ್ನು ಬಿಡೋದಿಲ್ಲ ಅಂತ"  ಕುಮಾರ ತನ್ನ ಮಾತು ಮುಂದುವರಿಸಿದ..
"ಜ್ಯೋತಿಷಿ ಪಕ್ಕಾ ಹೇಳಿದ್ದ.. ನಿನ್ನ ಮನೆಯಲ್ಲಾಗಲೀ ಆಜು ಬಾಜಿನಲ್ಲಾಗಲಿ ಮಾಟ ಮಾಡಿ, ಭೂತವನ್ನು ಬಂಧಿಸಿ ಇಡಲಾಗಿದೆ ಅಂತ.. ತುಂಬಾ ಹುಡುಕಿದೆ ಆದ್ರೆ ಏನೂ ಸಿಗಲಿಲ್ಲ..ಸಾಮಾನ್ಯವಾಗಿ ಇಂಥದ್ದೆಲ್ಲಾ ತಾಮ್ರದ ತಗಡಿನಲ್ಲಿ ಮಂತ್ರಿಸಿ, ಅಥವಾ ತೆಂಗಿನಕಾಯಿ, ನಿಂಬೆ ಹಣ್ಣು ಮಂತ್ರಿಸಿ ಮಾಡುತ್ತಾರಂತೆ, ಮಾಟದ ಪ್ರಭಾವ ದಿಂದ ಹೊರ ಬರಬೇಕಾದರೆ ಅದನ್ನು ನಮ್ಮ ಜಾಗದಿಂದ ದೂರ ಎಸೆಯಬೇಕು.. ಆವತ್ತಿಂದ ಹುಡುಕಿ ಹುಡುಕಿ ಸಾಕಾಯಿತು..ನನಗೇನೂ ಸಿಗಲಿಲ್ಲ...  ಪೂಜೆ ಹವನ ಎಲ್ಲಾ ಮಾಡಿಸ್ದೆ.. ಇಗೀಗ ನನ್ನ ಮಗಳು ಸಹ ಮಂಕಾಗಿರುತ್ತಾಳೆ.. ಮಾತೆ ಆಡೋದಿಲ್ಲ .. ಅವಳಿಗೆ ಏನಾದ್ರು ಆದ್ರೆ ಅಂತ ಹೆದರಿಕೆ." ಒಂದು ಕ್ಷಣ ಕುಮಾರ ಮಾತು ನಿಲ್ಲಿಸಿದ..
"ಇದು ೨೧ನೆ ಶತಮಾನ.. ಮಾಟ ಮಂತ್ರ ಇದ್ಯೋ ಇಲ್ವೋ ನಂಗೊತ್ತಿಲ್ಲ.. ದರಬೆಸಿ ಜನಗಳಿಗಿಂತ ದೊಡ್ಡ ಭೂತಾನೂ ಇರಲಿಕ್ಕಿಲ್ಲ,,, ಆದರೆ ನೀನೇನೂ ಹೆದರಬೇಡ... ಇದಕ್ಕೊಂದು ಪರಿಹಾರ ಇದೆ.." ನನ್ನ ಮಾತು ಕೇಳುತ್ತಿದ್ದ ಕುಮಾರ ನೆಟ್ಟಗಾದ... ಆತನಲ್ಲಿ ಕುತೂಹಲ ಮೂಡಿತು.. ಏನಾದರೂ ಮಾಡಿ ಈ ಮಾಟ-ಭೂತದಿಂದ ಹೊರ ಬಂದರೆ ಸಾಕು ಅನ್ನುವಂತಿತ್ತು ಆತನ ನೋಟ.. ಏನೆ ಹೇಳಿದರೂ ಮಾಡಲು ತಯಾರಾದಂತೆ ಅನ್ನಿಸಿತು...
"ನನಗೆ ಗೊತ್ತಿರೋ ಒಬ್ರು ಇದ್ದಾರೆ.. ಅವರಲ್ಲಿ ಇದಕ್ಕೆ ಖಂಡಿತಾ ಪರಿಹಾರ ಸಿಗಬಹುದು.. ಯಾವುದಕ್ಕೂ ನಾನು ಅವರನ್ನು ಭೇಟಿಯಾಗಿ ೨ ದಿನದಲ್ಲಿ ಇಲ್ಲಿಗೆ ಬರುತ್ತೇನೆ.. ಯಾವುದೇ ಭೂತವೇ ಇರಲಿ ಅದ್ರ ಬೆನ್ನು ಹತ್ತೋದು ಅಂದ್ರೆ ನಂಗೆ ತುಂಬಾ ಇಷ್ಟ" ಹಾಗಂತ ಹೇಳಿ ಹೊರಡಲನುವಾದೆ..
ತಾನೂ ಬರುತ್ತೇನೆ ಅಂದ ಕುಮಾರನಿಗೆ ಬೇಡ ಅಂತ ಹೇಳಿ ಅಲ್ಲಿಂದ ಎದ್ದು ಬಂದೆ..

ಛೆ.. ಹೇಗಿದ್ದ ಕುಮಾರ ಹೇಗಾದ? ಆ ಪೋಲಿ ಕುಮಾರ ಇವತ್ತು ಪೋಲಿಯೋ ಬಡಿದಂತೆ ಮಂಕಾಗಿದ್ದಾನೆ.. ಮಾಟ ಮಂತ್ರ, ಭೂತ ಎಲ್ಲಾ ಇದೆಯೋ ಇಲ್ಲವೋ, ಆದರೆ ಅದು ಇದೆ ಮತ್ತು ಅದು ನನ್ನ ಮೇಲೆ ದಾಳಿ ಮಾಡುವಂತೆ ಯಾರೋ ಮಾಡಿದ್ದಾರೆ  ಅನ್ನೋ ಹೆದರಿಕೆಯೇ ಆತನನ್ನು ಅರ್ಧ ಕೊಂದು ಹಾಕಿತ್ತು.. ಆಮೇಲೆ ನಡೆದ ಕೆಲವೊಂದು ಘಟನೆಗಳು , ಬೆಂಕಿಗೆ ತುಪ್ಪ ಸುರಿದಂತೆ ಆತನ ಹೆದರಿಕೆಯನ್ನು ಇಮ್ಮಡಿಗೊಳಿಸಿದ್ದವು..  ಆತ ಇದೆ ಗುಂಗಿನಲ್ಲಿ ತನ್ನ ಕೆಲಸ ಎಲ್ಲಾ ಬಿಟ್ಟು ಜ್ಯೋತಿಷಿ ಗಳ ಹಿಂದೆ ಬಿದ್ದಿದ್ದ.. ಬಿ ಪಿ ಹೆಚ್ಚಿತ್ತು.. ಆಡಲು ಬರುತ್ತಿದ್ದ ಮಗುವಿಗೆ ಬಯ್ಯುವುದು ಸಾಮಾನ್ಯವಾಗಿತ್ತು... ಮಗು ಮಂಕಾಗದೆ ಇನ್ನೇನಾಗುತ್ತೆ.?.. ಭೂತದ ಬೆನ್ನು ಹತ್ತಲು ನಾನು ತಯಾರಾದೆ!!

ಆತನ ಮನೆಗೆ ಮಾಡಿದ್ದ ಮಾಟ ತೆಗೆಸಲು ನಾನು ತಯಾರಾದೆ.. ಭೂತ ಓಡಿಸುವ ಬಗ್ಗೆ ಕೆಲವು ಬೇಕಾದ ಮಾಹಿತಿ ಕಲೆ ಹಾಕಿದೆ.. ಬೇಕಾದ ಸಿದ್ಧತೆ ಎಲ್ಲಾ ಮಾಡಿಕೊಂಡು ೨ ದಿನಗಳ ನಂತರ ನಾನು ಆತನ ಮನೆಯತ್ತ ಹೆಜ್ಜೆ ಹಾಕಿದೆ.. ಕೆಲವೊಂದು ಮಾತುಗಳ ನಂತರ ನಾನು ಆತನ ಮನೆಯೆಲ್ಲ ಒಮ್ಮೆ ಸುತ್ತು ಹಾಕಿದೆ.. ಮಲಗುವ ಕೋಣೆಯಲ್ಲಿ ಮಂಚವನ್ನು ಉತ್ತರ ದಿಕ್ಕಿನ ಕಡೆ ಹಾಕಲಾಗಿತ್ತು.. ಉತ್ತರ ದಿಕ್ಕಿಗೆ ಯಾಕೆ ತಲೆಹಾಕಿ ಮಲಗಬಾರದು ಅನ್ನೋ ಕಥೆ ನಮ್ಮ ಪುರಾಣಗಳಲ್ಲಿದೆ.. ಆದರೆ ಉತ್ತರ ದಿಕ್ಕಿನಲ್ಲಿ ಅಯಸ್ಕಾಂತೀಯ  ಶಕ್ತಿ ಹೆಚ್ಚು ಇದ್ದು ಅದು ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರಬಹುದು ಅಂತ ಎಲ್ಲೊ ವಿಜ್ಞಾನ ಓದಿದ್ದು ನೆನಪಾಯಿತು.. ಕುಮಾರನಿಗೆ ಹೇಳಿ ಮಂಚವನ್ನು ಪೂರ್ವ ದಿಕ್ಕಿನ ಕಡೆ ತಿರುಗಿಸಿದೆ..ತೆಗೆದು ಕೊಂಡು ಹೋಗಿದ್ದ ಫೆಂಗ್ ಶುಇ ಅಂತ ಕರೆಯೋ ಕರ್ಕಶ ಶಬ್ದ ಮಾಡೋ ಸಾಮಾನೊಂದನ್ನು  ಚಾವಡಿಯಲ್ಲಿ ನೇತು ಹಾಕಿದೆ..
"ಮೊದಲಿಗೆ ಮಾಟ ಮಾಡಿದ ಅನುಭವ ನಿಮಗೆ ಹೇಗಾಯಿತು?" ಕುಮಾರನಿಗೆ ಪ್ರಶ್ನೆ ಹಾಕುತ್ತಿದ್ದಂತೆ, ಕುಮಾರ ಮತ್ತು ಆತನ ಹೆಂಡತಿ ನನ್ನನ್ನು ಒಬ್ಬ ಮಾಂತ್ರಿಕನನ್ನು ನೋಡುವಂತೆ ಬೆರಗು ಕಣ್ಣುಗಳಿಂದ ನೋಡತೊಡಗಿದರು.."ದನ ಒಂದು ಸತ್ತು ಹೋಯಿತು.. ಏನು ಅಂತ ಬಲಿಮೆ (ಭವಿಷ್ಯ) ಕೇಳಿದೆವು.. ಆಗ ತಿಳಿಯಿತು" ಕುಮಾರನ ಹೆಂಡತಿ ಹೇಳುತ್ತಿದ್ದಂತೆ, ಅವರಿಬ್ಬರನ್ನೂ ದನಗಳನ್ನು ಕಟ್ಟುತ್ತಿದ್ದ ಹಟ್ಟಿಯ ಬಳಿ ಹೋಗುವಂತೆ ಹೇಳಿದೆ..
"ಅಂದರೆ ಮಾಟ ಮಾಡಿದ್ದು ಇಲ್ಲೇ ಎಲ್ಲೊ ಇರಬೇಕು.. ಇಲ್ಲಿಂದ ಪ್ರಾರಂಭವಾಗಿದೆ.. ಈಗ ಹುಡುಕಿ.. ಹಟ್ಟಿಯ ಸಂದಿ ಸಂದಿಗಳನ್ನು ಹುಡುಕಿ.." ಹಾಗಂತ ಹೇಳಿ ನಾನು ಹೊರಬಂದೆ.. ಕುಮಾರ ಮತ್ತು ಆತನ ಹೆಂಡತಿ ಹುಡುಕಿದ್ದೇ ಹುಡುಕಿದ್ದು.. ಅಲ್ಲೇನಿದೆ ಮಣ್ಣಾಂಗಟ್ಟಿ ಸಿಗೋಕೆ.. ಬರುತ್ತಿದ್ದ ನಗು ತಡೆದುಕೊಂಡು ಕುಮಾರನ ಪುಟಾಣಿ ಮಗಳ ಜೊತೆ ಆಟವಾಡತೊಡಗಿದೆ... ಸುಮಾರು ಅರ್ಧ ಘಂಟೆ ಕಳೆಯಿತು..
"ಇಲ್ಲಿ , ಇಲ್ಲಿ ಏನೋ ಇದೆ!!!" ಕುಮಾರ ಕಿಟಾರನೆ ಕಿರುಚಿಕೊಂಡಿದ್ದು ನೋಡಿ ಥಟ್ಟನೆ ಅತ್ತ ಓಡಿದೆ..

ಹೌದು ಅಲ್ಲೇನೋ ವಸ್ತುವೊಂದು ಹಟ್ಟಿಯ ಸಂದಿಯಲ್ಲಿತ್ತು.. ಕುಮಾರ ಅದನ್ನು ಹೊರ ತೆಗೆದಿದ್ದ.. ಪ್ಲಾಸ್ಟಿಕ್ ನಲ್ಲಿ ಕಟ್ಟಲಾಗಿದೆ.. ಆತನ ಕೈಯಿಂದ ಅದನ್ನು ತೆಗೆದುಕೊಂಡು ಮೆಲ್ಲನೆ ಬಿಚ್ಚಿದೆ.. ಪ್ಲಾಸ್ಟಿಕ್ ಗೆ ಮಣ್ಣೆಲ್ಲ ಅಂಟಿಕೊಂಡಿತ್ತು.. ಒಳಗಡೆ ನೋಡಿದವನೇ ಬೆಚ್ಚಿಬಿದ್ದೆ!!! ಅದರಲ್ಲಿತ್ತು ಒಂದು ತಾಮ್ರದ ತಗಡು, ಅದರ ತುಂಬಾ ಕುಂಕುಮ..!!!
ಪೂರ್ತಿ ಬಿಚ್ಚಲು ಧೈರ್ಯ ಸಾಲದೇ ಹಾಗೆ ಮತ್ತೆ ಕಟ್ಟಿದೆ.. "ದೂರ ದೂರಕ್ಕೆ ಎಸೆದು ಬಾ.. ಪೀಡೆ ತೊಲಗಲಿ.. ಹೋಗು.. ಬೇಗ ಹೋಗು.. ಯಾರಿಗೂ ತಿಳಿಯದಂತೆ ,ಯಾರ ಕೈಗೂ ಸಿಗದಂತಹ ಜಾಗಕ್ಕೆ ಎಸೆದು ಬಾ.."  ಬೆವರಿನಿಂದ ಒದ್ದೆಯಾಗಿದ್ದ ನಾನು ನಡುಗುವ ಧ್ವನಿಯಲ್ಲಿ ಕುಮಾರನಿಗೆ ಆಜ್ಞಾಪಿಸಿದೆ.. ಹಿಂದೂ ಮುಂದು ನೋಡದೆ, ನನ್ನ ಕೈಯಿಂದ ಪೊಟ್ಟಣ ತೆಗೆದುಕೊಂದವನೇ ತೋಟದತ್ತ ಓಡಿದ ಕುಮಾರ.. ಆತನ ತೋಟ ದಾಟಿದರೆ ಇರುವುದೇ ಕಪಿಲಾ ನದಿ.. ಅಲ್ಲಿಯೇ ಬಿಸಾಕುತ್ತೇನೆ ಅಂತ ಹೇಳಿ ಒಂದೇ ಓಟ ಕಿತ್ತ... ಅರ್ಧ ಘಂಟೆಯೊಳಗೆ ಎಲ್ಲವೂ ಮುಗಿದು ನಾನು ಹೊರಡಲನುವಾದೆ.. ಈ ವಿಷಯ ಯಾರಿಗೂ ಹೇಳಬಾರದು ಎಂದೂ, ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆರಾಮ ವಾಗಿರಬೇಕೆಂದು ಹೇಳಿ ನಾನು ಅಲ್ಲಿಂದ ಹೊರ ಬಂದೆ..ಕುಮಾರ ಮತ್ತು ಆತನ ಪತ್ನಿಯ ಮುಖದಲ್ಲಿ ಮಂದಹಾಸವಿತ್ತು.. ಕೆಲವು ದಿನಗಳ ನಂತರ ಆತ ತನ್ನ ಮನೆಯಲ್ಲಿ ಸತ್ಯನಾರಾಯಣ ಪೂಜೆ ,ಅದೂ ಇದೂ ಅಂತ ಕೆಲವೊಂದು ಪೂಜೆ ಮಾಡಿಸಿದ್ದ.. ನಾನೂ ಹೋಗಿ ಪ್ರಸಾದ ಸ್ವೀಕರಿಸಿ ಬಂದಿದ್ದೆ.. ಕುಮಾರನ ಸಂಸಾರ ಉಲ್ಲಾಸದಿಂದ ಇದ್ದಿದ್ದು ನೋಡಿ ಖುಷಿಯಾಯಿತು...
ಹಾಗಿರಲು, ಮೊನ್ನೆ ಕುಮಾರ ಫೋನ್ ಮಾಡಿದ್ದ.. ಕ್ಷೇಮ ಸಮಾಚಾರ ಮುಗಿದು "ನೀನು ಮಾಯವಾಗೋದು ಯಾವಾಗ" ಅಂತ ಆತನಿಗೆ ಕೇಳಿದೆ .. ಯಾಕೆ ಅಂದ.. ಅಲ್ಲ ನೀನು ಅಷ್ಟೊಂದು ಸಪೂರ ಆಗ್ಬಿಟ್ಟಿದ್ದೆ, ಹೀಗೆ ಆದ್ರೆ ಒಂದು ದಿನ ನೀನು ಮಾಯ ಆಗ್ಲೇ ಬೇಕಲ್ಲ ಅಂತ ನಕ್ಕೆ.. "ಇಲ್ವೋ ನಾನೀಗ ೬೫ ಕಿಲೋ ಗೊತ್ತ.." ಅಂತ ಪಕ ಪಕನೆ ನಕ್ಕ.. ಅದೇ ಕೆಲವೊಂದು ಪೋಲಿ ಜೋಕ್  ಮಾಡಿದ.. ಅಡಿಕೆ ಹೇಗಿತ್ತು ಈ ವರ್ಷ ಅಂತ ಕೇಳಿದ್ದಕ್ಕೆ "ಹೇಗಿರುತ್ತೆ?? ಪ್ರತಿ ಸಲದಂತೆ ಕೆಂಪಗೆ, ದುಂಡಗೆ ಹಾಗೆ ಇದೆ " ಅಂತ ಮತ್ತೆ ನಗಲು ಶುರು ಹಚ್ಚಿದ.. ಕುಮಾರ ಹಿಂದಿನಂತೆ ಆಗಿದ್ದು ನನಗೆ ಸಮಾಧಾನ ತಂದಿತ್ತು..ಮಾಟ ಮಂತ್ರ ಎಲ್ಲಾ ತೊಲಗಿ ಹೋಗಿದೆ ಅಂತ ಆತನಿಗೆ ಖಾತ್ರಿಯಾಗಿ ನಿರುಮ್ಮಳನಾಗಿದ್ದ... ಮಗಳನ್ನು ಈ ವರ್ಷ ಶಾಲೆಗೆ ಸೇರಿಸಬೇಕೆಂದು, ಇನ್ನೊಂದು ನಾಮಕರಣದ ಊಟಕ್ಕೆ  ನಾನು ಇನ್ನು ಕೆಲವೇ ತಿಂಗಳುಗಳಲ್ಲಿ ಆತನ ಮನೆಗೆ ಹೋಗಬೇಕಾಗುತ್ತೆ ಅಂತ ತಿಳಿದು ಸಂತೋಷವಾಯಿತು.. ಹಾಗೆ ಮಾತು ಮುಗಿಸಿದ ನಾನು,
ಆವತ್ತು ಹಟ್ಟಿಯಲ್ಲಿ ಸಿಕ್ಕಿದ್ದ ತಾಮ್ರದ ತಗಡನ್ನು ನಾನೇ ಶೆಣೈ ಅವರ ಅಂಗಡಿಯಿಂದ ತಂದಿದ್ದೆಂದೂ , ಅದರಲ್ಲಿ ಕುಂಕುಮ ಹಾಕಿ ಮಡಚಿ ಹಟ್ಟಿಯ ಹತ್ತಿರ ಹೋದಾಗ ಅವರಿಬ್ಬರಿಗೂ ತಿಳಿಯದಂತೆ ನಾನೇ ಇಟ್ಟಿದ್ದೆಂದೂ  , ಅದನ್ನೇ ಅವರಿಗೆ ಸಿಗುವಂತೆ ಮಾಡಿ ಮಾಟ ಎಲ್ಲಾ ಹೋಯ್ತು ಅನ್ನೋ ನಂಬಿಕೆ ಬರುವಂತೆ ಮಾಡಿದ್ದೆಂದೂ ,   ಕುಮಾರನಿಗೆ ಹೇಳಲೇ ಇಲ್ಲ!!!!!

--ಮುಗಿಯಿತು.

Monday, April 5, 2010

ಭೂತದ ಬೆನ್ನುಹತ್ತಿ !!!

ಕುಮಾರ ..!! ಕಾಲೇಜ್ ನಲ್ಲಿರುವಾಗ ನಮ್ಮ ಜೊತೆ ಗೆಳೆಯರ ಪೈಕಿ ಈತನೂ ಒಬ್ಬ... ನಮ್ಮ ಗುಂಪಿನಲ್ಲಿ ಅತ್ಯಂತ ಪೋಲಿ ಹುಡುಗ ಅಂದ್ರೆ ಈತನೇ.. ಯಾರಿಗಾದರೂ ಕಾಮೆಂಟ್ ಹೊಡೆಯೋದು, ತಮಾಷೆ ಮಾಡೋದು, ಲೈನ್ ಹೊಡೆಯೋದು ಎಲ್ಲದರಲ್ಲೂ ಮುಂದು.. ನಮ್ಮ ಕಾಲೇಜ್ ಗೆ ಬರುತ್ತಿದ್ದ ಮಿನಿ ಸ್ಕರ್ಟ್ ಹುಡುಗಿಯರಿಗೆ ಚೂಡಿದಾರ್ ಹಾಕಿಕೊಂಡು ಬರುವಂತೆ ಮಾಡಿದ್ದು ಈತನೇ... ಹೇಗೆ ಅಂತೀರಾ? ಯಾರಾದರೂ ಹುಡುಗೀರು ಮಿನಿ ಸ್ಕರ್ಟ್ ಹಾಕಿಕೊಂಡು ಬಂದರೆ ಮುಗೀತು ಈತ "ಉಫ್ಫ್" "ಉಫ್ಫ್" ಅಂತ ಗಾಳಿ ಬಿಡಲು ಪ್ರಾರಂಭಿಸುತ್ತಿದ್ದ.. ಏನಯ್ಯಾ ಇದು ಅಂತ ಒಮ್ಮೆ ಕೇಳಿದ್ದಕ್ಕೆ  "ಏನಿಲ್ಲಾ, ಅಷ್ಟೊಂದು ಚಿಕ್ಕ ಸ್ಕರ್ಟ್ ಹಾಕಿಕೊಂಡಿದ್ದಾಳಲ್ಲ, ಎಲ್ಲಿಯಾದರೂ ಗಾಳಿಗೆ ಮೇಲೆ ಹಾರುತ್ತೋ ನೋಡೋಣ" ಅಂತ ಹೇಳಿ ಪೋಲಿ ನಗು ಬೀರಿದ್ದ.. ಇದನ್ನು ತಿಳಿದ ಹುಡುಗೀರು ಮಿನಿ ಸ್ಕರ್ಟ್ ತೊಡೊದನ್ನೇ    ನಿಲ್ಲಿಸಿದರು...!!! ಇದೊಂದು sample  ಅಷ್ಟೇ ಆತನ ಪೋಲಿ ಕಥೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತೆ.. ತುಂಬಾ ಚಟುವಟಿಕೆಯ ಮನುಷ್ಯ .. ನೋಡಲೂ ಸುಮಾರಾಗಿದ್ದ.. ಕಾಲೇಜ್ ಮುಗಿಸಿ ಅಪ್ಪ ಮಾಡಿಟ್ಟಿದ್ದ ೧೦-೧೨ ಎಕರೆ ಯಷ್ಟಿದ್ದ ಜಮೀನಿನಲ್ಲಿ  ಕೃಷಿ ಮಾಡಿಕೊಂಡು ಹಾಯಾಗಿದ್ದ.. ಮದುವೆಯೂ ಆಗಿ ೨೦೦೫ ರ ಹೊತ್ತಿಗೆ ಒಂದು ಮಗು ಕೂಡ ಆಗಿತ್ತು... ಆದರೆ....
ಅದು ೨೦೦೯ ಜನವರಿನೋ ಫೆಬ್ರುವರಿನೋ ಸರಿಯಾಗಿ ನೆನಪಿಲ್ಲ , ಒಂದು ಸಾರಿ ಊರಿಗೆ ಹೋಗಿದ್ದ ನಾನು ಕುಮಾರನನ್ನು ಭೇಟಿಯಾದೆ.. ಆತನನ್ನು ನೋಡಿದ ನಾನು ಒಂದು ಕ್ಷಣ ಬೆಚ್ಚಿಬಿದ್ದೆ.. ಈತನೇ ಕುಮಾರನಾ? ನಂಬಲಿಕ್ಕೆ ಆಗಲಿಲ್ಲ.. ಆತನ ದೇಹ ಅಸ್ತಿಪಂಜರದಂತೆ ಆಗಿ ಹೋಗಿತ್ತು... ಆತನೇ ತುಂಬಾ ಪ್ರೀತಿಯಿಂದ ಬೆಳೆಸಿದ್ದ ತೋಟ ನೀರಿಲ್ಲದೆ ಕೆಂಪಗಾಗಿತ್ತು..."ಏನಯ್ಯ ಇದು" ಅಂದೆ... ಯಾರಿಗಾದರೂ ತಮಾಷೆ ಮಾಡುತ್ತಾ ಅಷ್ಟೊಂದು ಉಲ್ಲಾಸದಿಂದಿದ್ದ ಹಿಂದಿನ ಕುಮಾರ ಮಾತೆ ಆಡಲಿಲ್ಲ.. ನನಗೆ ಗಾಬರಿಯಾಯಿತು.. ಎಷ್ಟಾದರೂ ನನ್ನ ಸ್ನೇಹಿತನಲ್ಲವೇ.. "ಏನಾದರೂ ಖಾಯಿಲೇನಾ" ಮತ್ತೆ ಕೇಳಿದೆ.. ಇಲ್ಲಪ್ಪ ಅಂದ.. ಮತ್ತಿನ್ನೇನು ಹೀಗಾಗಿದ್ದಿಯಾ? ಅಂತ ಕೇಳಿದ್ದಕ್ಕೆ ಮನೆಗೆ ಬಾ ಮಾತಾಡೋಣ ಅಂತ ಕರೆದುಕೊಂಡು ಹೋದ... ನಾವು ಮನೆಗೆ ಹೋಗುತ್ತಿದ್ದಂತೆ ಅಲ್ಲೇ ಅಂಗಳದಲ್ಲಿದ್ದ ಆತನ ೩.೫ ವರ್ಷದ ಮಗಳು ಮನೆಯೊಳಕ್ಕೆ ಓಡಿಹೋದಳು.. ಆತನ ಮನೆಯನ್ನೊಮ್ಮೆ ವೀಕ್ಷಿಸಿದೆ... ಹಿಂದಿನ ಸೊಬಗಿಲ್ಲ.. ಆತನ ಮನೆ ಮುಂದೆ ಇದ್ದ ಎರಡು ಭಯಂಕರ ನಾಯಿಗಳ ಶಬ್ದವಿಲ್ಲ... ಆತನ ಹೆಂಡತಿಯೂ ಸೊರಗಿ ಹೋಗಿದ್ದಳು.. ನನಗೇನೂ ಅರ್ಥವಾಗದೆ ಆತನ ಮನೆಯ ಬದಿಯಲ್ಲಿದ್ದ ದನಗಳ ಹಟ್ಟಿಯ ಕಡೆ ವೀಕ್ಷಿಸಿದೆ.. ೧೦-೧೨ ರಷ್ಟಿದ್ದ ದನ ಎಮ್ಮೆ ಯಾವುದೂ ಇರಲಿಲ್ಲ..ಉಹುಂ ಒಂದೇ ಒಂದು ದನವಾಗಲಿ ಎಮ್ಮೆಯಾಗಲಿ ಇಲ್ಲ.. ಏನಿದೆಲ್ಲಾ.. ನನಗೆ ಅರ್ಥವಾಗದೆ ಮೆಲ್ಲನೆ ಕುರ್ಚಿಯಲ್ಲಿ ಕೂತೆ.. ಮನಸ್ಸಿನಲ್ಲಿ ಏನೇನೊ ಕಲ್ಪನೆಗಳು... ಏನಾದರೂ ಖಾಯಿಲೆ ಬಂದಿರಬಹುದೇ..? ಅಥವಾ ಈತನ ಅಪ್ಪನಂತೆ ಈತನೂ ಕುಡಿತದ ದಾಸನಾಗಿ ಬಿಟ್ಟನೇ? ಅಪ್ಪನ ಕುಡಿತ ಬಿಡಿಸಲು ಶತಾಯ ಗತಾಯ ಯತ್ನಿಸಿದ್ದ ಕುಮಾರನೇ ಹೀಗೆ ಮಾಡಿಯಾನೆ?.. ನಾನು ಸುಮ್ಮನೆ ಗರಬಡಿದಂತೆ ಕುಳಿತೆ ಇದ್ದೆ.. ಆತ ಕಾಫಿ ತಂದುಕೊಟ್ಟ.. ನನಗೆ ತಡೆಯಲಾಗಲಿಲ್ಲ... "ಏನೋ ಇದು , ಇದೇನು ಎಲ್ಲಾ ಹೀಗಾಗಿ ಹೋಗಿದೆ? ಏನಾದ್ರು ತೊಂದ್ರೆನಾ.. ಕೃಷಿಯಲ್ಲಿ ಏನಾದರೂ ಲೋಸ್ಸ್ ಆಯ್ತಾ.." ಆತ ಒಂದು ಕ್ಷಣ ಆತನ ಹೆಂಡತಿಯ ಮುಖ ನೋಡಿದ.. ಆಕೆಯ ಕಣ್ಣುಗಳು ಆಗಲೇ ಒದ್ದೆಯಾಗಿದ್ದವು..."ಇಲ್ಲ ಗೋರೆ.. ಈಗೆ ೮ ತಿಂಗಳ ಹಿಂದಿನಿಂದ ಇದು ಪ್ರಾರಂಭವಾಯಿತು" ಅಂದ..

ಅರ್ಥವಾಗದೆ ಆತನ ಮುಖ ನೋಡಿದೆ.. "ಈಗ್ಗೆ ೮ ತಿಂಗಳ ಹಿಂದೆ ನಮ್ಮ ಹಟ್ಟಿಯಲ್ಲಿ ೨ ದನಗಳು ಸತ್ತು ಹೋದವು.. ಆಮೇಲೆ  ಒಂದು ನಾಯಿ.. ಹೀಗೆ ೨-೩ ತಿಂಗಳಲ್ಲಿ ೪-೫ ಜೀವಗಳು ಒಂದೊಂದಾಗಿ ಹೋಗಿಬಿಟ್ವು.. ಏನೆಂದೇ ಅರ್ಥವಾಗಲಿಲ್ಲ.. ಗೋ- ಡಾಕ್ಟರ ಸಹ ಕಾರಣ ತಿಳಿಯದೆ ಹಿಂದುರಿಗಿದ...ಎಲ್ಲಾ ಸಾಯೋದು ಬೇಡ ಅಂತ ಎಲ್ಲಾ ದನ-ಕರು ಮಾರಿಬಿಟ್ಟೆ.. ನಾನೇ ತುಂಬಾ ಜ್ಯೋತಿಷಿ ಗಳ ಬಳಿ ಹೋದೆ.. ಆಮೇಲೆ ತಿಳೀತು ನೋಡು" ಆತ ಮಾತು ನಿಲ್ಲಿಸಿದ..
"ಏನು ಏನಂತ ತಿಳೀತು"
"ಕುಂದಾಪುರದ ಹತ್ತಿರ ಒಬ್ಬ ಜ್ಯೋತಿಷಿ ಇದ್ದಾನೆ , ತುಂಬಾ ತಿಳಿದವನು..ತುಂಬಾ ಫೇಮಸ್ ... ಆತನ ಬಳಿ ಪ್ರಶ್ನೆ ಕೇಳಿದೆ. ಆಗ್ಲೇ ನನಗೆ ಈ ವಿಷಯ ತಿಳಿದದ್ದು.. ಪರಿಹಾರಕ್ಕಾಗಿ ತುಂಬಾ ಖರ್ಚು ಮಾಡಿದೆ ಆದರೆ ಯಾವುದೇ ಉಪಯೋಗ ಆಗ್ಲಿಲ್ಲ.."
ಆತನ ಮುಖವನ್ನೇ ಗಮನಿಸಿದೆ.. ಇಷ್ಟು ಮಾತಿಗೆ ಆತ ಬೆವರತೊಡಗಿದ್ದ .!!
"ಯಾರೋ , ಯಾರೋ ನಮಗೆ ಮಾಟ ಮಾಡಿದ್ದಾರಂತೆ!!!"  ಕುಮಾರ ಗಕ್ಕನೆ ತನ್ನ ಮಾತು ನಿಲ್ಲಿಸಿದ..
"ಏನು? ಮಾಟ?? "  ನಾನು ಒಂದು ಕ್ಷಣ ಬೆಚ್ಚಿಬಿದ್ದೆ!!!!

--ಮುಂದುವರೆಯುವುದು..

ಬ್ಲಾಗ್ ಕಳ್ಳರು!!!

ಇದು ತುಂಬಾ ದಿನಗಳಿಂದ ನನ್ನ ತಲೆ ತಿನ್ನುತ್ತಿತ್ತು... http ://ravikanth -gore .blogspot .com ಅಂತ ಟೈಪಿಸಿದ ಕೂಡಲೇ ನನ್ನ ಬ್ಲಾಗ್ ಗೆ ಹೋಗೋದು ಬಿಟ್ಟು ಅದು ಇನ್ನೊಂದು ತಾಣ http ://freegadget2015 .blogspot .com ಅನ್ನೋ ತಾಣಕ್ಕೆ ಲಗ್ಗೆ ಇಡುತ್ತಿತ್ತು... ಇದ್ದ್ಯಾಕೆ ಹೀಗೆ ಅಂತ ಕಾರಣ ಹುಡುಕುತ್ತಲೇ ಇದ್ದೆ... ಕೊನೆಗೂ ತಿಳಿಯಿತು, ಇಲ್ಲಿ ಬ್ಲಾಗ್ ಕಳ್ಳರೂ ಇದ್ದಾರೆ..
ಬ್ಲಾಗಿಗೆ ಕೆಲವಾರು ತಿಂಗಳ ಹಿಂದೆ ಚೆಸ್ ಆಟದ gadget  ಒಂದನ್ನ ಸೇರಿಸಿದ್ದೆ ಇದಕ್ಕೆ ಕಾರಣ.. ಈ gadget ನಲ್ಲಿ ನಮ್ಮ ಬ್ಲಾಗ್ ಅನ್ನು hijack  ಮಾಡೋ ಕೋಡ್ ಬರೆದಿರುತ್ತಾರೆ.. ಅದು ನಮಗೆ ಬೇಕಾದ ತಾಣ ಬಿಟ್ಟು ಬೇರೆಯದೇ ತಾಣಗಳಿಗೆ ಲಗ್ಗೆಯಿಡುತ್ತದೆ... ಆ ಮೂಲಕ ಬ್ಲಾಗ್ ಕಳ್ಳರು ತಮ್ಮ ತಾಣಗಳ ಭೇಟಿಗಳ ಸಂಖ್ಯೆ ಹೆಚ್ಚಿಸಿಕೊಂಡು, ಗೂಗಲ್ ad ಮೂಲಕ ದುಡ್ಡು ಮಾಡುತ್ತಾರೆ.. ನಾನು ಆ ಚೆಸ್ ಆಟದ gadget ತೆಗೆದಿದ್ದೆ ಎಲ್ಲವೂ ಸರಿಹೋಯಿತು..
ಇದಿಷ್ಟೂ ನಿಮಗೂ ತಿಳಿದಿರಲಿ ಎಂದು ಇಲ್ಲಿ ಹಾಕಿದೆ.. ನೀವೂ ಇಂತಹ ತೊಂದರೆಗೆ ಸಿಳುಕಿಕೊಂಡಿದ್ದಲ್ಲಿ ಒಮ್ಮೆ ಇಂತಹ ಬೇಡದ gadget  ತೆಗೆದು ಹಾಕಿ ನೋಡಿ... ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿಸಿ..