ನಮ್ಮದು ಒಂದು ಚಿಕ್ಕ ಹಳ್ಳಿ... ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಿನ ಮಧ್ಯದಲ್ಲಿ ನಮ್ಮ ಮನೆ ಇತ್ತು (ಈವಾಗ ಅಲ್ಲಿ ನಕ್ಸಲೈಟ್ ಕಾಟ ಜಾಸ್ತಿ ಆಗಿ ತೋಟ ಮಾರಿ ನೆಲ್ಲಿಕಾರು ಅನ್ನೋ ಊರಲ್ಲಿ ಅಣ್ಣ ಮನೆಮಾಡಿಕೊಂಡಿದ್ದಾನೆ)... ಇನ್ನು ನಮ್ಮ ಪಕ್ಕದ ಮನೆ ಅಂದ್ರೆ ಸುಮಾರು ಅರ್ಧ ಕಿಲೋಮೀಟರು ದೂರ.. ನಮ್ಮ ಮನೆಯಿಂದ ಸುಮಾರು ೧ ಕಿಲೋಮೀಟರು ದೂರದಲ್ಲಿದ್ದದ್ದೆ ಅಚ್ಯುತ ಭಟ್ಟರ ಮನೆ... ನಾನು ಚಿಕ್ಕವನು ಅಂದ್ರೆ ೫-೬ ವರ್ಷದಿಂದ ಅವ್ರನ್ನು ನೋಡಿದ ನೆನಪು... ಬಹುಶ ಆಗ ಅವ್ರಿಗೆ ೬೫-೭೦ ವರ್ಷ ಇದ್ದಿರಬೇಕು... ಅವ್ರು ನಮ್ಮೂರಲ್ಲಿ ಭಾರಿ ಫೇಮಸ್ ಯಾಕಂದ್ರೆ ಅವ್ರಿಗೆ ಮದ್ವೇನೆ ಆಗಿರಲಿಲ್ಲ ಮತ್ತು ಆ ವಯಸ್ಸಿನಲ್ಲೂ ಮದ್ವೆ ಆಗ್ಬೇಕು ಅಂತ ಅವ್ರು ಹಾಕ್ತಿದ್ದ ಪ್ಲಾನ್...
ಅವ್ರ ಬಗ್ಗೆ ತುಂಬ ಕಥೆಗಳಿವೆ ಆದ್ರೆ ನಂಗೆ ತುಂಬ ಚೆನ್ನಾಗಿ ನೆನಪಿರೋದು ಅಂದ್ರೆ ಅವ್ರು ನಮ್ಮ ಇಡೀ ತಾಲೂಕಿಗೆ ಡಿಕ್ಲೆರೇಶನ್ ಕೊಟ್ಟಿದ್ದು... (ಡಿಕ್ಲರೇಶನ್ ಅಂದ್ರೆ ಉಳುವವನೇ ಭೂಮಿಯ ಒಡೆಯ ಅಂತ ಇಂದಿರಾ ಗಾಂಧಿಯವರು ತಂದ ಕಾನೂನು)...
ಇಂದಿರಾ ಗಾಂಧಿಯವರು ಅದ್ಯಾವಾಗ ಉಳುವವನೇ ಭೂಮಿಯ ಒಡೆಯ ಅಂತ ಕಾನೂನು ತಂದು ಅರ್ಜಿ ಹಾಕೋಕೆ ಹೇಳಿದರೋ ಆವಾಗ ಈ ಅಚ್ಯುತ ಭಟ್ಟರು ಇಡೀ ತಾಲುಕನ್ನೇ ಉಳುವವನು ನಾನು ಅಂತ ಅರ್ಜಿ ಹಾಕಿದರಂತೆ.... ಆದ್ರೆ ಅದು ಏನಾಯಿತು ಅಂತ ಕೇಳಿದ್ರೆ ಇನ್ನೊ ಏನೂ ಪ್ರತಿಕ್ರಿಯೆ ಬಂದಿಲ್ಲ ಅನ್ನುತ್ತಿದ್ದರು ಅಚ್ಯುತ ಭಟ್ಟರು!!!... ಮೊನ್ನೆ ಊರಿಗೆ ಹೋದಾಗ ಅವರನ್ನು ನೋಡ್ಕೊಂಡು ಬಂದೆ... ವಯಸ್ಸು ೮೫-೯೦ ರ ಆಸುಪಾಸು..ಈಗಲೋ ಆಗಲೋ ಅನ್ನುವಂತಿದ್ದಾರೆ ಆದ್ರೆ ನಂಗೆ ಇನ್ನೂ ಮದ್ವೆ ಆಗಿಲ್ಲ, ಕೊಟ್ಟ ಡಿಕ್ಲೆರೇಶನ್ ಅರ್ಜಿ ಏನಾಯಿತೋ ಏನೋ ಅಂತ ಮತ್ತೆ ಮೆಲ್ಲನೆ ಹೇಳಿಕೊಂಡರು ....ಬೆಂಗಳೂರಲ್ಲೇ ಇದ್ರೆ ನಂಗೊಂದು ಹುಡುಗಿ ಹುಡುಕ್ರಿ ಅಂದ್ರು ... ಎಷ್ಟು ವಯಸ್ಸಿನ ಹುಡುಗಿ ಬೇಕು ಅಂತ ಕೇಳ್ದೆ... ೪೦-೫೦ ಆಸುಪಾಸಿದ್ದು ತೊಂದ್ರೆ ಇಲ್ಲ ಅಂದ್ರು... ೪೦ ರ ವಯಸ್ಸಿನ ಹುಡುಗಿ ಸಿಕ್ಕಿಲ್ಲಂದ್ರೆ ೨೦ ರದ್ದು ಎರಡು ಆದಿತೋ ಅಂತ ಕೇಳಿದ್ದಕ್ಕೆ ಮೆಲ್ಲನೆ ನಕ್ಕರು... ವಯಸ್ಸು ಎಷ್ಟು ಅಂತ ಕೇಳಿದ್ದಕ್ಕೆ ೯೪- ೯೬ ಅಂತ ಏನೋ ಹೇಳಿದ್ರು.. ಸೆಂಚುರಿ ಬಾರ್ಸಿ ಅಜ್ಜಾ ಅಂತ ಹೇಳಿ ಅಲ್ಲಿಂದ ಎದ್ದು ಬಂದೆ...