ಅದ್ಯಾಕೋ ಈ ಕೆಲಸ ಸಾಕಾಗೋಗಿದೆ... ದಿನಾ ಬೆಳಿಗ್ಗೆ ಎದ್ದು ಅದೇ ಕಂಪ್ಯೂಟರ್ ಮುಂದೆ ಕೂತು ಸಂಜೆ ತನಕ ಕೀಬೋರ್ಡ್ ಒತ್ತಿ ಒತ್ತಿ ತಲೆ ಎಲ್ಲ ಹಾಳಾಗಿ ಹೋಗಿತ್ತು ಅಂತ್ಹೇಳಿ ಮೊನ್ನೆ ಊರಿನ ಕಡೆ ಹೊರಟೆ...
ಅದೆಷ್ಟು ಚೆಂದದ ಊರು... ಕಣ್ಣು ಹಾಯಿಸಿದಷ್ಟು ಹಸಿರು... ಸಂಜೆ ಹೊತ್ತಿಗೆ ಧಬೋ ಅಂತ ಸುರಿದ ಮಳೆ, ಕಾದ ಮನಸ್ಸನ್ನು ತಂಪಾಗಿಸಿದ್ದವು... ಬೆಳಿಗ್ಗೆ ಎದ್ದು ಕಾಫಿ ಕುಡಿದು ತೋಟದ ಕಡೆ ಹೆಜ್ಜೆ ಹಾಕಿದೆ... ೬-೭ ವರ್ಷಗಳ ಹಿಂದಿನ ದಿನಗಳು ನೆನಪಾದವು.... ಅದೇ ತೋಟ, ಅಲ್ಲಿ ಕಿತ್ತ ಸೊಪ್ಪು, ಹುಲ್ಲು, ಚಿಮ್ಮುವ ಸ್ಪ್ರಿಂಕ್ಲರ್, ಹೊತ್ತ ಗೊಬ್ಬರದ ವಾಸನೆ ಹಾಗೆಯೇ ಇದ್ದಂತ್ಹಿದ್ದವು ... ಹಕ್ಕಿಗಳ ಚಿಲಿಪಿಲಿ, ಪೇರಳೆ ಹಣ್ಣು (ಸೀಬೆ ಕಾಯಿ) , ಬೊಂಡ(ಸೀಯಾಳ), ಮಾವಿನ ಮಿಡಿ, ಪಪ್ಪಾಯಿ ಎಲ್ಲವನ್ನೂ ಸವಿದು ವಾಪಾಸು ಬೆಂಗಳೂರಿಗೆ ಹೊರಟಾಗ ಮನಸ್ಸು ಯಾಕೋ ಭಾರವಾಗಿತ್ತು... ಎಲ್ಲವನ್ನೂ ಬಿಟ್ಟು ಊರಲ್ಲಿ ಸ್ವಲ್ಪ ಜಮೀನು ಖರೀದಿಸಿ ವ್ಯವಸಾಯ ಶುರು ಮಾಡಿದರೆ ಹೇಗೆ ಅಂತ ಅದ್ಯಾವತ್ತಿನಿಂದಲೋ ಆಲೋಚಿಸುತ್ತಿದ್ದೇನೆ... ಆದರೆ ಯಾಕೋ ಎಲ್ಲವೂ ಏರುಪೇರು... ಇನ್ನೆಷ್ಟು ವರ್ಷಗಳು ಬೇಕೋ ನನ್ನ ಕನಸಿನ ಗೂಡಿಗೆ ವಾಪಸಾಗಲು... ಬೆಂಗಳೂರು ಅನ್ನೋದಂತೂ ನನಗ್ಯಾಕೋ ಚಕ್ರವ್ಯೂಹದ ಥರ ಅನ್ನಿಸ್ತಿದೆ... ಒಳಗೆ ಹೊಕ್ಕಾಗಿದೆ ಹೊರ ಬರುವ ದಾರಿ ಗೊತ್ತಾಗ್ತಿಲ್ಲ... ದಾರಿ ಕಾಣದಾಗಿದೆ ರಾಘವೆಂದ್ರನೆ...ಬೆಳಕ ತೋರಿ ನಡೆಸುವ.. ಅಂತ ಅತ್ತಿಗೆ ಮೊನ್ನೆ ಸಂಜೆ ಹೇಳುತ್ತಿದ್ದ ಭಜನೆ ಕಿವಿಯಲ್ಲಿ ಮತ್ತೆ ಮತ್ತೆ ಗುಯಿಗುಡುತ್ತಿದೆ...